• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

ಒಲ್ಲೆನೆ ವೈದಿಕ ಗಂಡನ

ಒಲ್ಲೆನೆ ವೈದಿಕ ಗಂಡನ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||

ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ
ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟಂತ ಹೇಳಲಿ ಕಷ್ಟದ ಒಗೆತನ || ಚರಣ ೧ ||

ಕೃಷ್ಣಾಜಿವನ್ನು ರಟ್ಟೇಲಿ ಹಾಕಿಕೊಂಡು ಬೆಟ್ಟಲ್ಲಿ ಗಿಂಡಿಯ ಹಿಡಿದಿಹನೇ
ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ಚರಣ ೨ ||

ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,
ಮುನ್ನಿನ ಜನ್ಮದಲ್ಲಿ ಪುರಂದರ ವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮಾ || ಚರಣ ೩ ||

ಆದದ್ದೆಲ್ಲ ಒಳಿತೆ ಆಯಿತು

ಆದದ್ದೆಲ್ಲ ಒಳಿತೆ ಆಯಿತು, ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು

ಚರಣಗಳು:

ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನಿ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆಯ ಹಾಕುವುದಕ್ಕೆ ಅರಸನಾಗಿ ನಾಚುತಿದ್ದೆ
ಸರಸಿಜಾಕ್ಷ ಪುರಂದರ ವಿಟ್ಠಲನು ತುಳಸಿ ಮಾಲೆ ಹಾಕಿಸಿದನಯ್ಯ

ಆಡ ಹೋದಲ್ಲೆ

ಪಲ್ಲವಿ:
ಆಡ ಹೋದಲ್ಲೆ ಮಕ್ಕಳು ಆಡಿಕೊಂಬುವರು ನೋಡಮ್ಮ

ಅನುಪಲ್ಲವಿ:
ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ

ಚರಣಗಳು:

ದೇವಕಿ ಹೆತ್ತಳಂತೆ ವಸುದೇವನೆಂಬುವ ಪಿತನಂತೆ
ಕಾವಲಲಿ ಹುಟ್ಟಿದೆಯಂತೆ ಮಾವಗಂಜಿಲ್ಲಿ ತಂದರಂತೆ ||

ವಿಷವು ತುಂಬಿದ ಮೊಲೆಯನುಂಡು ಅಸುರೆಯ ನಾ ಕೊಂದೆನಂತೆ
ನಿಶಿಚರ ಶಕಟಾಸುರನ ಶಿಶುಗಾಲಲೊರಸಿದೆನಂತೆ ||

ನೀನೆನ್ನ ಹಡೆದಿಲ್ಲವಂತೆ ನಾ ನಿನ್ನ ಮಗನಲ್ಲವಂತೆ
ಧೇನು ಕಾಯುವರಿಲ್ಲವೆಂದು ಸಾನುರಾಗದಿ ಸಲಹಿದೆಯಂತೆ||

ಕಿಚ್ಚ ನಾ ಗಡ ನುಂಗಿದೆನಂತೆ ವತ್ಸಾಸುರನ ಕೆಡಹಿದೆನಂತೆ
ಕಚ್ಚ ಬಂದ ಕಾಳಿಂಗನ ಕೊಚ್ಚಲು ಧುಮಿಕಿದೆನಂತೆ ||

ಹದ್ದು ಎನ್ನ ವಾಹನನಂತೆ ಹಾವು ಎನ್ನ ಹಾಸಿಗೆಯಂತೆ
ಕದ್ದು ಬೆಣ್ಣೆಯ ನಾ ತಿಂದೆನಂತೆ ಮುದ್ದು ಪುರಂದರ ವಿಟ್ಟಲನಂತೆ ||

ಆಚಾರವಿಲ್ಲದ ನಾಲಿಗೆ

ಪಲ್ಲವಿ:
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ

ಅನುಪಲ್ಲವಿ:
ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ

ಚರಣ:

ಪ್ರಾತಃಕಾಲದೊಳೆದ್ದು ನಾಲಿಗೆ , ಸಿರಿ ಪತಿಯೆನ್ನ ಬಾರದೆ ನಾಲಿಗೆ
ಪತಿತ ಪಾವನ ನಮ್ಮ ರಜಪತಿ ಜನಕನ, ಸತತವು ನುಡಿ ಕಂಡ್ಯ ನಾಲಿಗೆ

ಚಾಡಿ ಹೇಳಲು ಬೇಡ ನಾಲಿಗೆ , ನಿನ್ನ ಬೇಡಿಕೊಂಬುವೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ , ಪಾಡುತಲಿರು ಕಂಡ್ಯ ನಾಲಿಗೆ

ಹರಿಯ ಸ್ಮರಣೆ ಮಾಡು ನಾಲಿಗೆ , ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಟ್ಟಲ ರಾಯನ ಚರಣ ಕಮಲ ನೆನೆ ನಾಲಿಗೆ

ಬಂದ ನೋಡಿ

ಪಲ್ಲವಿ:

ಬಂದ ನೋಡಿ ಗೋವಿಂದ ಕೃಷ್ಣ

ಅನುಪಲ್ಲವಿ:

ಬಂದ ಆನಂದ ತೀರ್ಥ ಮುನೀಂದ್ರ ವಂದ್ಯ ಹರಿ ನಂದ ಮುಕುಂದನು

ಚರಣ:

1: ಸರಸಿಜಾಕ್ಷ ದೊರೆಯೆ ಸರ್ವರ ಪೊರೆವ ದಯಾನಿಧಿಯೆ
ಕರಿಯ ವರನ ಚಕ್ರದಿ ಉದ್ಧರಿಸಿದ ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯನು

2: ಇಂದ್ರದೇವ ವಂದ್ಯ ಇಶ್ಟರೈಂದು ಕಾವ್ಯ ನಿತ್ಯಾನಂದ
ಚಂದ್ರ ಕೋಟಿ ಲಾವಣ್ಯ ಮುಖದಲಿ ಸುಂದರ ಅರಳೆಲ ಹಾರಗಳಿಂದಲಿ

3: ಚರಣ ಕಮಲಕಾಂತೆ ಸರ್ವದಾ ಮಾಳ್ಪುದು ದಯವಂತೆ
ತರತರ ಜನರಿಗೆ ಕರೆದು ವರವನೀವ ಸರಸಿಜಾಕ್ಷ ನಮ್ಮ ಪುರಂದರ ವಿಟ್ಠಲನು

ಆರು ಬದುಕಿದರಯ್ಯ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ ||

ತೋರು ಈ ಧರೆಯೊಳಗೆ ಒಬ್ಬರನು ಕಾಣೆ || ಅನುಪಲ್ಲವಿ ||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧|

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ ||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯನರಿಯೆ
ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||

ಮುಳ್ಳು ಕೊನೆಯ ಮೇಲೆ

೧:  ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨:  ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩:  ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪:  ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫:  ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬:  ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭:  ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ
೮:  ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯:  ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦:  ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧:  ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ ಎರಡು ಸೋಕವು ಒಂದು ತಾಕಲೇ ಇಲ್ಲ
೧೨:  ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!

ನಿನ್ನಂಥ ಸ್ವಾಮಿ ನನಗುಂಟು

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!

ಮುಪ್ಪಿನ ಗಂಡನ ಒಲ್ಲೆನು ನಾನು

ಪಲ್ಲವಿ:
ಮುಪ್ಪಿನ ಗಂಡನ ಒಲ್ಲೆನು ನಾನು

ಅನುಪಲ್ಲವಿ:
ತಪ್ಪದೆ ಪಡಿಪಾಟ ಪಡಲಾರೆನಕ್ಕ

ಚರಣ:

1:

ಉದಯದಲ್ಲೇಳಬೇಕು ಉದಕ ಕಾಸಲುಬೇಕು
ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು
ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲುಬೇಕು
ಬಿದಿರುಕೋಲನು ತಂದು ಮುಂದೆ ಇಡಬೇಕಕ್ಕ

2:

ಮೆತ್ತನೆ ರೊಟ್ಟಿ ಮುದ್ದೆಯ ಮಾಡಲುಬೇಕು
ಒತ್ತಿ ಒದರಿ ಕೂಗಿ ಕರೆಯಲುಬೇಕು
ವಾಕರಿಕೆಯು ಮೂಗಿನ ಸಿಂಬಳ
ಮತ್ತೆ ವೇಳೆಗೆ ಎದ್ದು ತೊಳೆಯಬೇಕಕ್ಕ

3:

ಗೋಣಿ ಹಾಸಲು ಬೇಕು ಬೆನ್ನ ಗುದ್ದಲುಬೇಕು
ಗೋಣು ಹಿಡಿದು ಮೇಲಕ್ಕೆತ್ತಬೇಕು
ಶ್ರೀನಿಧಿ ಪುರಂದರ ವಿಟ್ಠಲನ್ನ ನೆನೆಯುತ್ತ
ನಾನೊಂದು ಮೂಲೇಲಿ ಒರಗಬೇಕಕ್ಕ

ಇಂದಿನ ದಿನವೇ ಶುಭದಿವು!

ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

Follow

Get every new post delivered to your Inbox.