Posted on July 15, 2008 by neelanjana
ಪಲ್ಲವಿ:
ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ
ಚರಣಗಳು:
ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರಿದೆ
ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡುಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರು ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ
ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜ ಜನಕ ಶ್ರೀ ಪುರಂದರ ವಿಟ್ಠಲ
Filed under: ದಶಾವತಾರ, ಧ | Tagged: ದಶಾವತಾರ, ಧ | Leave a Comment »
Posted on July 15, 2008 by neelanjana
ಪಲ್ಲವಿ
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ
ಚರಣಗಳು:
ಉರಗ ಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ
ಮಂದರಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ
ಪಕ್ಷಿವಾಹನ ಬಂದ ಲಕ್ಷ್ಮಿ ರಮಣ ಬಂದ
ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದ
ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠಲ ಬಂದನೋ
Filed under: ದ | Tagged: ದ | Leave a Comment »
Posted on July 15, 2008 by neelanjana
ಪಲ್ಲವಿ:
ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ
ಚರಣ:
ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವನೆನ್ನ ಶಿರದಲ್ಲಿ ಮುಡಿಸೊ ||೧||
ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೊಡಿಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||೨||
ಮೊರೆಹೊಕ್ಕವರ ಕಾವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು ||೩||
Filed under: ದ | Tagged: ದ, ದಾಸ, ವೆಂಕಟರಮಣ | Leave a Comment »
Posted on July 15, 2008 by neelanjana
ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು | ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಪ ||
ಹರಿಯು ಮುಡಿದ ಹೂವು ಹರಿವಾಣದೊಳಗೆ ಇಟ್ಟುಕೊಂಡು ||
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ || ೧ ||
ಒಡಲು ಜಾಗಟೆಯ ಮಾಡಿ ನುಡಿವ ನಾಲಿಗೆ ಘಂಟೆ ಮಾಡಿ ||
ಬಿಡದೆ ಢಣಢಣಢಣರೆಂದು ಹೊಡೆದು ಚಪ್ಪಾಳಿಕ್ಕುತ || ೨ ||
ಇಂತು ಲೋಕಕ್ಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು ||
ಸಂತತ ಶ್ರೀಪುರಂದರವಿಠಲನೇ ಪರದೈವವೆಂದು || ೩ ||
Filed under: ಡ | Tagged: ಡ, ಡಂಗುರ, ಪಾಂಡುರಂಗ, ರಂಗ | Leave a Comment »
Posted on July 15, 2008 by neelanjana
ಪಲ್ಲವಿ:
ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ
ಅನುಪಲ್ಲವಿ:
ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು
ಚರಣಗಳು:
1.
ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲ ಮನ ಗಂಗೆ ತುಂಬಿ
ಸುಮ್ಮಾನದುರಿಯ ಹಚ್ಚಿ ಒಮ್ಮಾನಕ್ಯನ್ನವಾಗಿ
2:
ಅರಿವು ಎಂಬ ಅರಿವೆ ಹಾಸಿ ಹರಿವಿಹಾಲ ಮೊಸರ ತಳಿದು
ಪರಮ ವೈರಾಗ್ಯದಿಂದಲೆ ಶ್ರೀ ಹರಿಗೆ ಅರ್ಪಿತವೆಂದು
3:
ಕರ್ತು ಪುರಂದರ ವಿಟ್ಟಲ ತತ್ವವೆಂಬ ಬುತ್ತಿಯನು
ಹತ್ತಿರ ತಂದಿಟ್ಟು ಕೊಂಡು ನಿತ್ಯ ಉಂಡು ತೃಪ್ತಿ ಪಡಿರೊ
Filed under: ಬ | Tagged: ಬ | Leave a Comment »