ಪಲ್ಲವಿ:
ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು ||
ಚರಣಗಳು:
ಭೂತ ದಯಾಪರನಾಗಿರ ಬೇಕು |
ಪಾತಕವೆಲ್ಲವ ಕಳೆಯಲು ಬೇಕು |
ಮಾತು ಮಾತಿಗೆ ಹರಿಯೆನ್ನ ಬೇಕು ||1||
ಆರು ವರ್ಗವನಾಳಿಯಲು ಬೇಕು |
ಮೂರು ಗುಣಂಗಳ ಮೀರಲು ಬೇಕು |
ಸೇರಿ ಬ್ರಹ್ಮನೊಳು ಸುಖಿಸಲು ಬೇಕು ||2||
ಅಷ್ಟ ಮದಂಗಳ ತುಳಿಯಲು ಬೇಕು |
ದುಷ್ಟರ ಸಂಗವ ಬಿಡಲು ಬೇಕು |
ಕೃಷ್ಣ ಕೇಶವ ಎನ್ನಬೇಕು ||3||
ವೇದ ಶಾಸ್ತ್ರವನೋದಲು ಬೇಕು |
ಭೇದಹಂಕಾರವ ನೀಗಲು ಬೇಕು |
ಮಾಧವ ಸ್ಮರಣೆಯೊಳಿರಬೇಕು ||4||
ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು |
ಭ್ರಾಂತಿ ಕ್ರೋಧವ ಕಳೆಯಲು ಬೇಕು |
ಸಂತರ ಸಂಗದಿ ರತಿಯಿರಬೇಕು ||5||
ಗುರುವಿನ ಚರಣಕ್ಕೆರಗಲುಬೇಕು |
ತರುಣೋಪಾಯವನರಿಯಲುಬೇಕು |
ವಿರಕ್ತಿ ಮಾರ್ಗದಲಿರಬೇಕು ||6||
ಬಂದದ್ದುಂಡು ಸುಖಿಸಲುಬೇಕು |
ನಿಂದಾ ಸ್ತುತಿಗಳ ತಾಳಲುಬೇಕು |
ತಂದೆ ಪುರಂದರ ವಿಟ್ಟಲನೆನಬೇಕು ||7||
Filed under: ನ