• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

ಪೊಂಗೊಳಲೂದುತಿಹ

ಪಲ್ಲವಿ:
ಪೊಂಗೊಳಲೂದುತಿಹ ಯದುಕುಲೋತ್ತುಂಗ
ಅನುಪಲ್ಲವಿ:
ತಿಂಗಳಪಾಂಗನೆ ರಜತ ಶುಭಾಂಗ
ಚರಣ:
1:
ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ
ಬಲಿಯ ಬೇಡಿದನು ಭೃಗು ಕುಲದಿ ಜನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ
ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ 
2:
ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ
ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ
ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ
 ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ 
3:
ವಾರಿಚರ ಕೂರ್ಮಾವತಾರ ಸೂಕರ ಕ್ರೂರ
ಧರಣಿಯನೆಳೆದು ಶೂರರನು ಗೆಲಿದು
ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು
ಏರಿದನು ಹಯವ ಪುರಂದರ ವಿಠಲ ಜಗದೊಡೆಯ

ಅಂಗಿ ತೊಟ್ಟೇನೆ

ಪಲ್ಲವಿ
ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ ಹಾಲ ಕುಡಿದೇನೆ ಗೋಪಿ ಆಕಳ ಕಾಯ್ದೇನೆ
ಚರಣ:
1:
ಚಕ್ಕುಲಿ ಕೊಡು ಎನಗೆ ಗೋಪಿ
ಅಕ್ಕರದಿ ಬಂದೆನೆ ಗೊಲ್ಲರ
ಮಕ್ಕಳ ಎಲ್ಲರೊಡ ಗೂಡಿ ಹಲವು
ಗೋವ್ಗಳ ಕಾಯ್ದು ಬಂದೆನೆ
2:
ಅಮ್ಮಣ್ಣಿ ಕೊಡು ಎನಗೆ ಗೋಪಿ
ಬೆಣ್ಣೆಯ ತೋರೆ ಮೇಲೆ
ಗಮ್ಮನೆ ತಟಕನೆ ಮೊಸರನೆ ಸವಿದು
ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು
3:
ಅಪ್ಪಚ್ಚಿ ಕೊಡು ಎನಗೆ ಗೋಪಿ
ತುಪ್ಪವ ಕೊಡೆ ಮೇಲೆ
ಅಪ್ಪಗೆ ಹೇಳಿ ಟೊಪ್ಪಿಗೆ ಕೊಡಿಸೆ
ಉಪ್ಪು ಕಡಲೆಯನ್ನು ಚೀಲದಿ ತುಂಬುವೆ
4:
ಚೆಂಡು ಕೊಡು ಎನಗೆ ಗೋಪಿ
ಚಿನಿಕೋಲು ಬೇಕಲ್ಲ
ಗುಂಡು ಕಲ್ಲಿನಂಥ ಬುತ್ತಿಯ ಕಟ್ಟಿ
ಹಿಂಡು ಗೋವುಗಳ ಕಾಯ್ದು ಬಂದೆನೆ
5:
ಈ ಲೀಲೆಗಳ ಕೇಳಿ ಗೋಪಿ
ತೋಳಿನೊಳ್ ಬಿಗಿದಪ್ಪಿ
ಶ್ರೀಲೋಲ ಪುರಂದರ [...]

ಮಕುಟಕ್ಕೆ ಮಂಗಳ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಗಗೆ
ವಕ್ಷಕ್ಕೆ ಮಂಗಳ ವಟು ವಾಮನನಿಗೆ
ಪಕ್ಷಕ್ಕೆ ಮಂಗಳ ಭಾರ್ಗವಗೆ
ಕಕ್ಷಕ್ಕೆ ಮಂಗಳ ಕಾಕುತ್ಸ ರಾಮಗೆ
ಕುಕ್ಷಿಗೆ ಮಂಗಳ ಕೃಷ್ಣರಾಯಗೆ
ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಚಲುವ ಕಲ್ಕಿಗೇ
ಪರಿಪರಿ ಮಂಗಳ ಪರಮಾತ್ಮಗೆ
ಪುರಂದರ ವಿಟ್ಠಲಗೆ ಜಯಮಂಗಳ

ಶ್ರೀನಿವಾಸ ನೀನೇ ಪಾಲಿಸೋ

ಪಲ್ಲವಿ:
ಶ್ರೀನಿವಾಸ ನೀನೇ ಪಾಲಿಸೋ ಶೃತಜನ ಪಾಲ
ಗಾನಲೋಲ ಶ್ರೀ ಮುಕುಂದನೇ
ಅನುಪಲ್ಲವಿ:

ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ
ಚರಣ:

1:
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಾನು (?)
ನಿಂದು ತತ್ತರಿಸುತಿಹೆನೊ ಮುಕುಂದ
2:
ಎಷ್ಟು ದಿನ ಕಷ್ಟ ಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕಯ್ಯ ಪಿಡಿದು
3:
ಅನುದಿನ ಅನೇಕ ರೋಗಂಗಳ ಅನುಭವಿಸುವೆನು
ಘನ ಮಹಿಮನೆ ಕೇಳಯ್ಯ ತನುವಿನಲ್ಲಿ ಬಲವಿಲ್ಲ
ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಟ್ಠಲನೇ ಕಯ್ಯ ಪಿಡಿದು

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ?
ಏನು ನೋಡಿದರೇನು ಏನು ಮಾಡಿದರೇನು
ಮನದೊಳಗಿನ ತಾಮಸ ಮಾಣದನ್ನಕ್ಕ
ಕೊಳಲ ದನಿಗೆ ಸರ್ಪ ತಲೆದೂಗುವಂದದಿ
ಇದಕೇನು ಮದ್ದು ಪುರಂದರ ವಿಠಲ? 

ಪಂಕಜ ಮುಖಿಯರೆಲ್ಲರು ಬಂದು

ಪಲ್ಲವಿ:
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ
ಚರಣ:
1:
ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ
ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ
2:
ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ
ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ
3:
ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ
ಭಕ್ತರ ಸಲಹುವ ಪುರಂದರ ವಿಟ್ಠಲಗೆ ಮುತ್ತೈದೆಯರಾರತಿ ಎತ್ತಿರೆ

ಇವಗೇಕೆ ಶೃಂಗಾರ

ಪಲ್ಲವಿ:
ಇವಗೇಕೆ ಶೃಂಗಾರ ಇವಗೇಕೆ ಬಂಗಾರ?
ಅನುಪಲ್ಲವಿ:
ಕಾಡ ಕರಡಿಯಂತೆ ಪೋಲುವ ದೇಹಕ್ಕೆ
ಚರಣ ೧:
ನೀರೊಳಗೆ ಮುಳುಗಿದವಗೆ ಪರಿಮಳ ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ?
ಕೋರೆ ದಾಡೆಯ ಘೋರ ಮುಖಗೇಕೆ ಕನ್ನಡಿ ಕರುಳ ಹಾರ ಧರಿಸಿದವಕೆ ಹಾರ ಪದಕವೇಕೆ?
ಚರಣ ೨:
ನೆಲವನಳೆದವಗೆ ಕಾಲ ಕಿರುಗೆಜ್ಜೆ ಏಕೆ ತಲೆ ತಾಯ ತರಿದವಗೆ ಮರಿಯಾದೆಯೇಕೆ?
ಚೇಲಾರಿವೆಯ ಉಟ್ಟವಗೇಕೆ ಪೀತಾಂಬರ ಪಾಲ ಕದ್ದು ಕುಡಿದವಗೆ ಕುಸುಮ ಕೇಸರಿಯೇಕೆ?
ಚರಣ ೩:
ಬತ್ತಲೆ ನಿಂತಿದ್ದವಗೆ ಕಸ್ತೂರಿ ತಿಲಕವೇಕೆ ಉತ್ತಮ ಹಯವನೇರಿದವಕೆ ಪುಷ್ಪಕವೇಕೆ?
ಚಿತ್ತಜನಯ್ಯ ಶ್ರೀ ಪುರಂದರ ವಿಟ್ಠಲ ಭಕ್ತರ ಸಲಹುವಗೆ ಬಹಿರಂಗದಾಭರಣವೇಕೆ?

ಇವಗೇಕೆ ಪರಿಮಳ

ಇವಗೇಕೆ ಪರಿಮಳ.  ರಾಗ:  ಯದುಕುಲಕಾಂಭೋಜಿ.  ತ್ರಿಪುಟ ತಾಳ.
ಪಲ್ಲವಿ: 
ಇವಗೇಕೆ ಪರಿಮಳ ಇವಗೇಕೆ ಶೃಂಗಾರ ?
ಅನುಪಲ್ಲವಿ:
ನವನೀತ ಚೋರ ನಾರುವ ಗೊಲ್ಲಗೆ ?
ಚರಣ: 
ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ?
ತಲೆದೋರುವವಗೇಕೆ ದಟ್ಟ ಪುನುಗು ?
ಬಲು ಕೇಶದವಗೇಕೆ ಬಾವನ್ನದಾ ಲೇಪ ?
ಸಲೆಕುರೂಪಿನವಗೇಕೆ ಮಂಡೆಸಾದು* ? 
ತುಲಸಿ ಮಾಲೆಯ ಧರಿಸಿದವಗೇಕೆ ಜವ್ವಾಜಿ ?
ಕೊಲೆಗಡುಕಗೇಕೆ ಕುಂಕುಮದ ತಿಲಕ ?
ಅಲೆದಾಡುವವಗೇಕೆ  ಅಂಗರಾಗದ ಸುಖ ?
ಕಳವು ಮಾಡುವವಗೇಕನಂಗ  ಸೊಬಗು ?
ಪರಸತಿಯ ಬಯಸುವಗೆ ಪನ್ನಗ ಶಯನವೇಕೆ?
ಹರಿದಾಡುವನಿಗೇಕೆ ಆದ ಪಗಡಿ** ?
ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ
ಧರೆಗಧಿಕನಾದನೀ ಪುರಂದರ ವಿಟ್ಠಲ
* ನೊಸಲಸಾದು ಎಂಬ ಪಾಠವೂ ಇದೆ.
** [...]

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ||
ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ
ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹಾವತಾರಗೆ
ತರಳನ್ನ ಕಾಯ್ದಂಥ ನರಸಿಂಹಗೆ ||೧||
ಭೂಮಿಯ ದಾನವ ಬೇಡಿದವಗೆ
ಆ ಮಹಾಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯರಸ ಶ್ರೀಕೃಷ್ಣಗೆ ||೨||
ಬತ್ತಲೆ ನಿಂತ ಬೌದ್ಧಾವತಾರಗೆ
ಉತ್ತಮಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ
ಮುದ್ದು ಪುರಂದರ ವಿಟ್ಠಲಗೆ ||೩||

ಎಂಥವನೆಂಥವನೆ ರಂಗಯ್ಯ

ಪಲ್ಲವಿ:
ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ
ಚರಣ:
೧:
ಆಗಮವನು ತಂದವನೆ ರಂಗ
ಬೇಗದಿ ಗಿರಿಯ ಪೊತ್ತವನೆ
ಮೂಗಿಂದ ಭೂಮಿಯನೆತ್ತಿದನೆ ಶಿಶು
ಕೂಗಲು ಕಂಭದಿಂದೊದಗಿದನೆ ಕೃಷ್ಣ
೨: 
ಧರಣಿಯ ಈರಡಿ ಮಾಡಿದನೆ ಭೂ-
ಸುರನಾಗಿ ಪರಶುವ ಧರಿಸಿದನೆ
ಭರದಿ ಕೋಡಗ ಹಿಂಡ ಕೂಡಿದನೆ ಫಣಿ-
ಶಿರದಲಿ ಕುಣಿಕುಣಿದಾಡಿದನೆ ರಂಗ
೩: 
ಉಟ್ಟಿದ್ದ ಬಟ್ಟೆಯ ಬಿಸುಟಿಹನೆ ರಂಗ
ದಿಟ್ಟ ತೇಜಿಯನೇರಿ ಮೆರೆಯುವನೆ
ದುಷ್ಟರನೆಲ್ಲ ಸಂಹರಿಸಿದನೆ ನಮ್ಮ
ದಿಟ್ಟ ಪುರಂದರ ವಿಟ್ಠಲನೆ ಕೃಷ್ಣ